ಸಮಯ ನೀಡದ ಸ್ಥಳೀಯ ಶಾಸಕರು: ಆರು ತಿಂಗಳಿಂದ ಉದ್ಘಾಟನೆಗೆ ಕಾಯುತ್ತಿರುವ 22 ಇಂದಿರಾ ಕ್ಯಾಂಟೀನ್!

ಬೆಂಗಳೂರು: ರಾಜ್ಯದ ವಿವಿಧೆಡೆ ಹೊಸದಾಗಿ ನಿರ್ಮಾಣಗೊಂಡಿರುವ 22 ಇಂದಿರಾ ಕ್ಯಾಂಟೀನ್ಗಳಿಗೆ ಕಳೆದ ಆರು ತಿಂಗಳಿಂದ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ. ಕ್ಯಾಂಟೀನ್ ನಿರ್ಮಾಣದ ಕಾರ್ಯ ಪೂರ್ಣಗೊಂಡರೂ ಸ್ಥಳೀಯ ಶಾಸಕರು ಉದ್ಘಾಟಿಸಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಹೇಳಿದೆ.
ವಿಧಾನ ಪರಿಷತ್ನಲ್ಲಿ ಕೆ.ಎಸ್. ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ರಹೀಂಖಾನ್, ಇಂದಿರಾ ಕ್ಯಾಂಟೀನ್ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದೆ. ರಾಜ್ಯದಲ್ಲಿ 346 ಇಂದಿರಾ ಕ್ಯಾಂಟೀನ್ ಗಳು ಕಾರ್ಯನಿರ್ವಹಿಸುತ್ತಿವೆ. 15 ಕ್ಯಾಂಟಿನ್ಗಳು ನಿರ್ಮಾಣ ಹಂತದಲ್ಲಿವೆ. 22 ಕ್ಯಾಂಟೀನ್ಗಳ ನಿರ್ಮಾಣ ಪೂರ್ಣಗೊಂಡಿದ್ದರೂ ಕಳೆದ ಆರು ತಿಂಗಳಿಂದ ಸ್ಥಳೀಯ ಶಾಸಕರು ಉದ್ಘಾಟನೆಗೆ ಸಮಯ ನೀಡಿಲ್ಲ. ಈ ಬಗ್ಗೆ ವೈಯಕ್ತಿಕವಾಗಿ ಪತ್ರ ಬರೆದು ಉದ್ಘಾಟಿಸುವಂತೆ ಮನವಿ ಮಾಡಿದ್ದೇನೆ. ಈ ತಿಂಗಳಲ್ಲಿ ಕ್ಯಾಂಟೀನ್ಗಳನ್ನ ಉದ್ಘಾಟಿಸುವ ಭರವಸೆ ನೀಡಿದ್ದಾರೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ನವೀನ್, 2017ರಲ್ಲಿ ಇಂದಿರಾ ಕ್ಯಾಂಟೀನ್ಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಿದ್ದ ಎಕ್ಸೆಲ್ ಪ್ರಿ ಕಾಸ್ಟ್ ಸೊಲ್ಯುಷನ್ ಪ್ರೈವೇಟ್ ಕಂಪನಿಗೆ 2023ರಲ್ಲಿ ಎರಡನೇ ಹಂತದ 186 ಕ್ಯಾಂಟೀನ್ಗಳ ನಿರ್ಮಾಣಕ್ಕೂ ಗುತ್ತಿಗೆ ನೀಡಲಾಗಿದೆ. ಈ ಕಂಪನಿಗೆ ಕೆಟಿಪಿಪಿ ಕಾಯ್ದೆಯ 4 (ಜಿ) ವಿನಾಯಿತಿ ನೀಡಲಾಗಿದೆ. ಸದ್ಯ ಕಂಪನಿ ಬಗ್ಗೆ ಪರಿಶೀಲಿಸಿದಾಗ ಕಂಪನಿ ಮುಚ್ಚಿದೆ ಎಂಬ ಮಾಹಿತಿ ಬಂದಿದೆ. ನಿರ್ದಿಷ್ಟ ಕಂಪನಿಗೆ ಎರಡು ಬಾರಿ ಗುತ್ತಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಸಚಿವ ರಹೀಂಖಾನ್ ಮಾತನಾಡಿ ಇಂದಿರಾ ಕ್ಯಾಂಟೀನ್ಗಳ ನಿರ್ಮಾಣ ವಿಚಾರವಾಗಿ 2023ರಲ್ಲಿ ಅರ್ಜಿ ಸಲ್ಲಿಸಿ ಕಂಪನಿಗೆ ಬಿಡ್ ಮಾಡಿತ್ತು. ಎರಡನೇ ಹಂತದ ಕ್ಯಾಂಟೀನ್ಗಳನ್ನ ಇದೇ ಕಂಪನಿ ನಿರ್ಮಿಸುತ್ತಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಅರ್ಹತೆ ಅನುಸಾರವಾಗಿ ಎಕ್ಸೆಲ್ ಪ್ರಿ ಕಾಸ್ಟ್ ಸೊಲ್ಯೂಷನ್ ಕಂಪನಿಗೆ ಎರಡನೇ ಬಾರಿ ಗುತ್ತಿಗೆ ನೀಡಲಾಗಿದೆ. ಅರ್ಹ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಅನುಮಾನವಿದ್ದರೆ ಕಂಪನಿಗೆ ಹೋಗಿ ಪರಿಶೀಲಿಸಿ. ದಾರಿಯಲ್ಲಿ ಹೋಗುವವರ ಬಳಿ ಮಾಹಿತಿ ಪಡೆದು ಆರೋಪ ಮಾಡುವುದು ಸರಿಯಲ್ಲ ಎಂದರು.
ಇದಕ್ಕೆ ಆಕ್ಷೇಪಿಸಿದ ನವೀನ್, ನಾನು ದಾರಿಯಲ್ಲಿ ಹೋಗುವವರ ಬಳಿ ಮಾಹಿತಿ ಪಡೆದುಕೊಂಡಿಲ್ಲ. ಬೇರೆಯವರ ಮಾತು ಕೇಳಿಕೊಂಡು ಆರೋಪಿಸಲ್ಲ ಎಂದು ಆಕ್ರೋಶ ಹೊರಹಾಕಿದರು.
ಬಜೆಟ್ ಮೇಲಿನ ಚರ್ಚೆಗೆ ಬುಧವಾರ ಸಿಎಂ ಉತ್ತರ ನೀಡಲಿದ್ದು, ಮಾರ್ಚ್ 26 ರಂದು ಬಜೆಟ್ ಅಧಿವೇಶನ ಕಲಾಪ ಕೊನೆಗೊಳ್ಳಲಿದೆ.



